ಹುತ್ತದ ಮಣ್ಣಿನ ಬಹು ಉಪಯೋಗ!

ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಿಕರು ಮಣ್ಣಿನ ತತ್ವವನ್ನು ಚಿಕಿತ್ಸೆಗೆ ಬಳಸುತ್ತಿದ್ದರು. ಕಪ್ಪು ಮಣ್ಣು ಅಥವಾ ಹುತ್ತದ ಮಣ್ಣನ್ನು ಪ್ರಕತಿ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆಗೆ ಬಳಸುತ್ತಾರೆ. ಹುತ್ತದ ಮಣ್ಣು ಚರ್ಮದ ವ್ಯಾಧಿಗಳಲ್ಲಿ ವಿಶೇಷ ಪರಿಣಾಮ ಹೊಂದಿದ್ದರೆ ಕಪ್ಪು ಮಣ್ಣು ಸೂರ್ಯ ಕಿರಣಗಳ ಶಕ್ತಿಯನ್ನು ದೇಹಕ್ಕೆ ವರ್ಗಾಯಿಸುವ ಮತ್ತು ದೇಹದಿಂದ ಅಧಿಕ ಉಷ್ಣಾಂಶವನ್ನು ಹೀರುವ ಅಗಾಧಶಕ್ತಿ ಹೊಂದಿದೆ.

ಈ ಚಿಕಿತ್ಸೆಯಿಂದ ಮೊಡವೆಗಳು ಕಡಿಮೆ ಆಗುತ್ತವೆ. ಮೊಡವೆಯಿಂದ ಉಂಟಾದ ಕಲೆಯನ್ನು ಹೋಗಲಾಡಿಸುತ್ತದೆ.ಉರಿಯೂತವನ್ನು ತಡೆಯುತ್ತದೆ. ಕಣ್ಣಿನ ಆಯಾಸವನ್ನು ಕಡಿಮೆ ಮಾಡುತ್ತದೆ. ಕುಷ್ಠರೋಗ, ಅಲರ್ಜಿ, ಸೋರಿಯಾಸಿಸ್ ಹಾಗೂ ಇತರ ಚರ್ಮರೋಗಗಳಿಗೆ ಮಡ್ ಥೆರಪಿಯಿಂದ ಪರಿಹಾರ ಕಂಡುಕೊಳ್ಳಬಹುದು.

ಮಣ್ಣಿನ ತಯಾರಿಕ:-ಚಿಕಿತ್ಸೆಗೆ ಬಳಸುವ ಮಣ್ಣನ್ನು ಅತ್ಯಂತ ಜಾಗರೂಕತೆಯಿಂದ ಆಯ್ಕೆ ಮಾಡಬೇಕು. ರಾಸಾಯನಿಕ ಪದಾರ್ಥಗಳಿಂದ ಮುಕ್ತವಾದ ಪ್ರದೇಶದಿಂದ ಮಣ್ಣು ತೆಗೆಯುವುದು ಉತ್ತಮ ಅಥವಾ ಭೂಮಿಯ ಮೇಲ್ಮೈಯಿಂದ 3-4 ಅಡಿ ಆಳದಿಂದ ಮಣ್ಣನ್ನು ತೆಗೆಯುವುದು. ಆ ರೀತಿ ತೆಗೆದ ಮಣ್ಣನ್ನು ಕಲ್ಮಶಗಳಿಂದ ಶುದ್ಧೀಕರಿಸಿ ಎರಡು ದಿನಗಳವರೆಗೆ ಒಣಗಿಸಿ ಮಣ್ಣು ಮೃದುವಾಗುವಂತೆ ಪುಡಿಮಾಡಿ ಶೋಧಿಸಿ ನಂತರ ಒಂದು ಬಕೆಟ್ ನಲ್ಲಿ ನೆನೆ ಹಾಕಬೇಕು.

ಪೂರ್ಣ ಮಣ್ಣಿನ ಸ್ನಾನ:-ಹದಮಾಡಿದ ಮಣ್ಣನ್ನು ವ್ಯಕ್ತಿಯ ಪೂರ್ಣ ದೇಹಕ್ಕೆ ಲೇಪಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಣ್ಣು ಕಿವಿ ಮತ್ತು ಕಣ್ಣುಗಳ ಒಳ ಸೇರದಂತೆ ಎಚ್ಚರ ವಹಿಸಬೇಕು. ಮಣ್ಣನ್ನು ಲೇಪಿಸಿದ ನಂತರ ಸುಮಾರು 45 ನಿಮಿಷಗಳ ವರೆಗೆ ಸೂರ್ಯಕಿರಣಗಳಿಗೆ ಮೈ ಒಡ್ಡಬೇಕು. ನಂತರ ತಣ್ಣೀರಿನ ಸ್ನಾನ ಮಾಡಬೇಕು.

ಮಣ್ಣಿನ ಅರ್ಧ ಸ್ನಾನ ಅಂದರೆ ಈ ವಿಧಾನದಲ್ಲಿ ಮಣ್ಣನ್ನು ದೇಹದ ನಿರ್ದಿಷ್ಟ ಭಾಗಕ್ಕೆ ಲೇಪಿಸಲಾಗುತ್ತದೆ. ಅದು ನೇರವಾಗಿ ಚರ್ಮದ ಮೇಲಾಗಿರಬಹುದು ಮಣ್ಣಿನ ಪಟ್ಟಿಗಳ ಮೂಲಕವಾಗಿರಬಹುದು.

ಪ್ರಕತಿ ಚಿಕಿತ್ಸಾಲಯಗಳಲ್ಲಿ ಕಾಟನ್ ಬಟ್ಟೆಯಲ್ಲಿ ಮಣ್ಣಿನ ಪ್ಯಾಕ್ ತಯಾರಿಸಿ ಹೊಟ್ಟೆ ಹಾಗೂ ಕಣ್ಣುಗಳ ಮೇಲೆ ಈ ಪಟ್ಟಿಗಳನ್ನು ಎಲ್ಲ ಸಾಧಕರಿಗೆ ಪ್ರತಿದಿನ ನೀಡಲಾಗುತ್ತದೆ. ಇನ್ನೂ ತೊಂದರೆ ಇರುವ ಭಾಗಕ್ಕೆ ನೇರವಾಗಿಯೂ ಸಹ ಮಣ್ಣಿನ ಲೇಪನ ಮಾಡಬಹುದು.

Related Post

Leave a Comment